Tuesday, January 18, 2011

ಮೂರ್ಖ(ಕ) ಪ್ರೀತಿಯ ಬ(ಬು)ಗ್ಗೆ

ನಿನ್ನ ಸನ್ನೆ, ನಿನ್ನ ಮಾತು,
ನಿನ್ನ ಬಯಕೆ, ನಿನ್ನ ಬದುಕು
ನನ್ನದೆಂಬ ಭ್ರಮೆಯ ಲೋಕ,
ವಾಸಿ ನಾನು ಮಾನಸಿಕ.....

ವಾಸ್ತವ ಸತ್ಯಗಳು ಯಾವಾಗಲು ವಿಪರೀತವಾಗಿ ಮನಸನ್ನು ನೋಯಿಸುತ್ತವೆ... ಸತಾಯಿಸುತ್ತವೆ... ಸಾಯಿಸುತ್ತವೆ.... ಅಂಥಹ ಕಹಿ ಸತ್ಯಗಳೊಂದಿಗೆ ಬದುಕುವುದಕ್ಕಿಂತ ಯಾವುದೋ ಭ್ರಮೆಯಲ್ಲಿ ಬದುಕನ್ನು ಸುಲಭವಾಗಿ ತಳ್ಳಬಹುದು. ಎಲ್ಲಿಯವರೆಗೂ ತಳ್ಳಲಾಗುವುದೋ ಅಲ್ಲಿಯವರೆಗೆ....

ಹೀಗೆ ಬದುಕಬೇಕೆಂದು ನಾನೇನು ಒತ್ತಾಯಿಸುತ್ತಿಲ್ಲ ಹಾಗೇ ಇದು ಸರಿಯಾದ ನಿರ್ಧಾರವೆಂದು ನಾನೇನು ಸಮರ್ಥಿಸುತ್ತಿಲ್ಲ. ಮನ ನೋಯಿಸುವ ಸತ್ಯಗಳು ಅದೆಷ್ಟು ಅಪಾಯಕಾರಿ ಎಂಬುದು ಊಹಿಸಲು ಅಸಾಧ್ಯ... ಅದು ಎಂಥಹ ವಿನಾಶಕ್ಕಾದರು ಕಾರಣವಾಗಬಹುದು. ಸತ್ಯವನ್ನು ಅರಗಿಸಿಕೊಳ್ಳುವವರೆಗೆ, ಮನಸು ಬುದ್ಧಿಗಳೆರಡು ಸ್ಥಿಮಿತಕ್ಕೆ ಸಿಗುವುದರೊಳಗೆ, ಅದೆಂಥ ಗಂಡಾಂತರವನ್ನು ಬೇಕಾದರೂ ಸೃಷ್ಟಿಸಬಹುದು. 


ಹಾಗಾಗಿಯೇ ನಾನು ಭ್ರಮೆಯಲ್ಲಿ ಬದುಕಿ ಅಂದಿದ್ದು...

ಅದೇನು ಅಂಥ ಕಷ್ಟದ ಕೆಲಸವಾಗುವುದಿಲ್ಲ, ಏಕೆಂದರೆ ವಾಸ್ತವವನ್ನು ಮರೆತವನಿಗೆ ಮಾತ್ರ ಸತ್ಯಗಳು ಸಾಯಿಸುತ್ತದೆ. ಅಂದರೆ ಭ್ರಮೆಯಲ್ಲಿದ್ದವನು ಮಾತ್ರ ವಾಸ್ತವವನ್ನು ಮರೆಯಲು ಸಾಧ್ಯ...


to be continued....

 ಆಪ್ತವಾದುದು ಅನಿವಾರ್ಯ
ಅರ್ಥವಾದುದು ವಿಪರ್ಯಾಸ...

Wednesday, January 5, 2011

ಮುಗ್ಧ (ಗಿದ) ಪ್ರೀತಿಗೆ ಶೀರ್ಷಿಕೆ ಏ(ಬೇ)ಕೆ?

ಹೌದು, ನಾನೊಬ್ಬ ಭಗ್ನ ಪ್ರೇಮಿ. ಬದುಕಿನ ಬದಲಾವಣೆಗೆ ಪ್ರೀತಿಯನ್ನು ಕಳೆದುಕೊಂಡವನು, ಮತ್ತೆಂದು ಪಡೆದುಕೊಳ್ಳಲಾಗದವನು, ಆ ಮಧುರ ಕ್ಷಣಗಳನ್ನು ಮರೆಯಲಾಗದವನು, ಅದರ ನೆನಪುಗಳಲ್ಲೇ ನಗುವಾಗಿರುವವನು...

ನಾನು ಅಷ್ಟೊಂದು ಅಪರಿಮಿತವಾಗಿ ಪ್ರೀತಿಸಿದ್ದ, ಕಳೆದುಕೊಂಡ ಹಾಗೂ ಪದೇ ಪದೇ ನೆನಪಾಗೋ, ಕೊನೆಯವರೆಗೂ ಮರೆಯಲಾಗದ ಆ ಪ್ರೀತಿಯ ಹೆಸರು "ಬಾಲ್ಯ". ಪ್ರತಿಯೊಬ್ಬರ ಬದುಕಿನ ಪ್ರಾರ್ಥಮಿಕ ಘಟ್ಟ. ತಮ್ಮ ತಮ್ಮ ಬಾಲ್ಯವನ್ನು ಪ್ರೀತಿಸಿದವರೆಲ್ಲರೂ  ಬದುಕಿನಲ್ಲಿ ಭಗ್ನ ಪ್ರೇಮಿಗಳೇ... ಕಾರಣ ಅದು ಬದುಕಿನಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ, ನೆನಪೊಂದನ್ನು ಬಿಟ್ಟು.

ನಿಜವಾದ ಪ್ರೀತಿ ಅರ್ಥವಾಗುವುದು ದೂರವಾದ ಮೇಲೆ ಎನ್ನುವಂತೆ ಬಾಲ್ಯ ಕಳೆದ ಮೇಲೆ ನಮಗೆ ಅದರ ಮಹತ್ವ ಅರ್ಥವಾಗುವುದು.

ಬಾಲ್ಯ - ಬದುಕಿನ ಯಾವುದೇ ಚಿಂತೆಯಿಲ್ಲದೆ, ಯಾರಲ್ಲೂ ಭೇದ ಕಾಣದೆ, ತಪ್ಪುಗಳನ್ನು ಮನಸಿನಲ್ಲಿಟ್ಟುಕೊಳ್ಳದೇ, ನಿರ್ಧಾರಗಳನ್ನು ಸಮರ್ಥಿಸಿಕೊಳ್ಳದೇ, ಹಾಗೆ ಬದುಕುವ ನಿಷ್ಕಲ್ಮಶ ಪುಟ್ಟ ಮನಸು.

ದೊಡ್ಡವರಾಗುತಿದ್ದಂತೆ ಲೆಕ್ಕಾಚಾರಗಳು ಪ್ರಾರಂಭ. ಅವರಿಗಿಂತ ನಾವು ಚೆನ್ನಾಗಿರಬೇಕು, ಅವರು ನಮಗೆ ಮೋಸ ಮಾಡಿಬಿಟ್ಟರು, ನಾವು ಮಾಡಿದ ಸಹಾಯ ಅವರಿಗೆ ನೆನಪಿಲ್ಲ.... ಹೀಗೆ ಸಾವಿರ ಸಾವಿರ ಲೆಕ್ಕಾಚಾರಗಳು. ಒಳಗೊಂದು, ಹೊರಗೊಂದು...

ಮುಂದಿನದರ ಪರಿವೆ ಇಲ್ಲದೆ, ಹಿಂದೆ ನಡೆದಿದ್ದರ ಬಗ್ಗೆ ಚಿಂತೆಯಿಲ್ಲದೆ, ಇಂದು ಆನಂದವಾಗಿ ಜೀವನವನ್ನು ಕಳೆಯುವ ಕಾಲಘಟ್ಟಕ್ಕೆ ಬಾಲ್ಯ ಅನ್ನಬಹುದೇನೋ. ದೊಡ್ಡವರಾದ ಮೇಲೆ ಹಾಗೆ ಬದುಕಲು ಸಾಧ್ಯವಿಲ್ಲ. ಪ್ರತಿಷ್ಟೇಗಳಿಗೆ ಬದುಕಬೇಕಾಗುತ್ತದೆ. ಅನಿವಾರ್ಯ....

ಹಾಗಾಗಿ ನಾನೊಬ್ಬ ಬಾಲ್ಯವನ್ನು ಅರ್ಥಾತ್ ನನ್ನ ಪ್ರೀತಿಯನ್ನು ಕಳೆದುಕೊಂಡ ವಿರಹಿ. ಈ ಬದುಕಿನ ಜಂಜಾಟದಲ್ಲಿ ಅದನ್ನು ಮತ್ತೆ ಮತ್ತೆ ಬಯಸುವ ಆಕಾಂಕ್ಷಿ, ನೆನಪುಗಳ ಅಂಗಳದಲ್ಲಿ ವೀಕ್ಷಕ, ಬದುಕಿನ ಹಾದಿಯಲಿ ಪ್ರೇಕ್ಷಕ......